ಜಲ್ಲೆ ಸಿದ್ದಮ್ಮ ಸಾಂಪ್ರದಾಯಿಕ ಪ್ರಸೂತಿಯ ಬಗ್ಗೆ ಸುಮಾರು ೨೫-೩೦ ವರ್ಷಳ ಕಾಲ ಸೇವೆ ಸಲ್ಲಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರು. == ಜನನ, ಜೀವನ == ಜಲ್ಲೆ ಸಿದ್ದಮ್ಮ ಹುಟ್ಟಿದ್ದು ಚಾಮರಾಜನಗರ ತಾಲ್ಲೋಕು ಕಾಡಿಗೆರೆ ಸೋಲಿಗ ಜನಾಂಗದಲ್ಲಿ. ತಂದೆ- ಹಾಲೇಗೌಡ, ತಾಯಿ ಜಡೇ ಮಾದಮ್ಮ. ಬಾಲ್ಯದಲ್ಲಿ ಸಿದ್ದಮ್ಮ ಶಾಲೆಗೆ ಹೋಗಿ ಶಿಕ್ಷಣಪಡೆಯದೆ, ಪೋಡಿನ ಹಿರಿಯರ ಮಾರ್ಗದರ್ಶನದಂತೆ ಬೆಳೆದರು. ಬಾಲ್ಯದಲ್ಲಿಯೇ ಈಕೆ ಬಿಳಿಗಿರಿರಂಗನ ಬೆಟ್ಟದ ಯರಕನ ಗದ್ದೆಯ ಪೋಡಿನ ಜಲ್ಲೆ ಮಾದೇಗೌಡರನ್ನು ಸೋಲಿಗರ ಸಂಪ್ರದಾಯದಂತೆ ಮದುವೆಯಾದಳು. ಸಿದ್ದಮ್ಮನಿಗೆ ಮೂರು ಗಂಡು, ಐದು ಹೆಣ್ಣು. == ವೈದ್ಯೆಯಾಗಿ == ಸುಮಾರು ೨೫೦ ಔಷಧೀಯ ಸಸ್ಯಗಳ ಖಚಿತ ತಿಳಿವಳಿಕೆಅವರಿಗಿತ್ತು. ಜನಪದ ವೈದ್ಯೆಯಾಗಿ ಅವರು ಜನರ ಕಷ್ಟಗಳಿಗೆ ನೆರವಾದರು. ಜನಪದ ಹಾಡುಗಾರ್ತಿಯಾಗಿ ಸಮುದಾಯದ ಸಂಭ್ರಮವನ್ನು ಹೆಚ್ಚಿಸಿದರು. ಯಾವ ಪ್ರತಿಫಲಾನುಪೇಕ್ಷೆ ಇಲ್ಲದೆ ಇವೆಲ್ಲವನ್ನು ನಡೆಸಿದ ಹಿರಿಯ ಜೀವವಿದು. ಹೆಣ್ಣೋರ್ವಳು ಗರ್ಭಿಣಿಯಾಗಿ ಗರ್ಭಾವಧಿಯ ಒಂಬತ್ತೂ ತಿಂಗಳು ನೂರ ಇಪ್ಪತ್ತಾರು ಗಿಡಮೂಲಿಕೆಗಳನ್ನು ತಿಂಗಳಿಗನುಗುಣವಾಗಿ ಮತ್ತು ಆ ದೇಹಯನ್ನು ಬೇಡಿಕೆಯನ್ನು ಪರಿಶೀಲಿಸಿ ಜಲ್ಲೆ ಸಿದ್ದಮ್ಮ ನೀಡುತ್ತಿದ್ದರು. ತುಂಬಿದ ಬಸುರಿಯ ಕೈಗೆ ಆಧಾರವಾಗಿ ಹಿಡಿಯಲು ನೇತಾಡುವ ಹಗ್ಗ ಕೊಟ್ಟು, ಕುಕ್ಕರಗಾಲಿನಲ್ಲಿ ಕೂರಿಸಿ ಹೆರಿಗೆ ಮಾಡಿಸುವ ಸೋಲಿಗರ ಸಾಂಪ್ರದಾಯಿಕ ಕ್ರಮದಲ್ಲಿ ಪರಿಣಿತಳಾಗಿದ್ದ ಆಕೆ ಸಮಾಜದ ಸರ್ವರಿಗೆ ಹೀಗೆ ನೂರಾರು ಬಾರಿ ಸಹಾಯ ಮಾಡಿದ್ದರು. ಒಂದೇ ಒಂದು ಶಿಶುವಾಗಲೀ, ತಾಯಿಯಾಗಲೀ ಜಲ್ಲೆ ಸಿದ್ದಮ್ಮರ ಕೈಯಾಸರೆಯಲ್ಲಿ ಮರಣಿಸಲಿಲ್ಲವೆಂದು ಆಕೆಗೆ ಆಪ್ತರಾದ ಎಚ್ ರಾಮಾಚಾರ್ ಗೌರವದಿಂದ ನೆನೆಯುತ್ತಾರೆ. ಇದೆಲ್ಲ ಸೇರಿ ರೂಪುಗೊಂಡದ್ದು ಜಲ್ಲೆ ಸಿದ್ದಮ್ಮರ ಸೃಜನಶೀಲತೆ. == ನಿಧನ == ಸೋಲಿಗ ಜನಾಂಗದ ಪರಂಪರೆಯ ಬಗ್ಗೆ ಅಪಾರ ಮಾಹಿತಿಯನ್ನು ತಿಳಿದಿದ್ದ ಜಲ್ಲೆ ಸಿದ್ದಮ್ಮ ೨೦೦೪ನೆಯ ಇಸವಿಯಲ್ಲಿ ತೀರಿಕೊಂಡರು. ಆಕೆಯ ವಿದ್ವತ್ತು, ಪ್ರತಿಭೆ, ಸೇವೆಗಾಗಿ ಕರ್ನಾಟಕ ಸರಕಾರ ೨೦೦೦ನೇ ಇಸವಿಯಲ್ಲಿ ರಾಜ್ಯ ಪ್ರಶಸ್ತಿ ಕೊಟ್ಟು ಸನ್ಮಾನಿಸಿದೆ. == ಪ್ರಶಸ್ತಿ, ಗೌರವ == ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಜಾನಪದ ಪ್ರಸೂತಿ ತಜ್ಞೆ ಎಂಬ ಗೌರವ == ಉಲ್ಲೇಖ ==